Tuesday, July 31, 2018

ಹಕ್ಕಿಯ ಪಯಣ

ವಿಫುಲ ಗಗನದ ತಳದಿ
ಇರುಳೊಡೆವ ಕಾಲದಲಿ
ನಸುಗೆಂಪು ಬೆಳಕಿನಲಿ
ಒಂಟಿ ಹಕ್ಕಿಯ ಪಯಣ

ಕತ್ತಲೆಯು ಪಸರುವುದೊ
ಬೆಳಕೆಲ್ಲಿ ಮರೆಯುವುದೊ
ಪಥವೆಲ್ಲಿ ಮಸುಕುವೊದೊ
ಎಂಬ ಭಯವುಂಟು

ಕಂದಗಳು ಕೊರಗುವವು
ಅಮ್ಮನಿರೆ ಮರುಗುವವು
ಗೂಡ ತಲುಪದೆ ಬಿಡೆನು
ಎಂಬ ಛಲವುಂಟು

ತನ್ನಮ್ಮ ಅನುದಿನದಿ
ತಿನ್ನಿಸಿದ ತಿನಿಸಿಂದ
ಕಸುವು ಹೊಂದಿದ ರೆಕ್ಕೆ
ಇನ್ನೆಂದಿಗುಂಟು

ವೇಗವನು ಇಮ್ಮಡಿಸಿ
ತಡೆಗಳನು ಕಡೆಗಣಿಸಿ
ಏಕ ನೋಟದಿ ಗುರಿಗೆ
ಸಾಗುತಿಹುದೀಗ

ತನ್ನ ಮುಂದಿನ ಯುಗಕೆ
ತಾನು ಕೊಟ್ಟೂಡುಗೊರೆಯು
ಕಾಯ್ದಿಟ್ಟು ಫಲಬರಲು
ಸಾರ್ಥಕ್ಯವುಂಟು

ತನಗೆ ಸಾರ್ಥಕ್ಯವುಂಟು

Saturday, July 28, 2018

ಶೋಧ

ಮುಗಿಲ ಮೇಲೆ ಮೋಡ ನಿಂತು
ಮಳೆಯ ನೀರು ಸುರಿಸದಿರಲು
ಹಸಿರು ತನಗೆ ಕೇಳುತಿಹುದು
ವರ್ಷಧಾರೆಗರೆಯಲು

ಸುತ್ತಲೆಲ್ಲ ಧಗೆಯು ಹರಡಿ
ತಾನು ಅದರ ಬಿಸಿಗೆ ಬೆಂದು
ಬಹುಳ ತಾಪದಿಂದ ನೊಂದು
ಅರಸುತಿಹುದು ತಂಪನು

ಬಹಳ ಕಾಲ ಸುಪ್ತವಿದ್ದ
ನೋವ ಗ್ರಹಿಕೆಯಳಿದು ಹೋದ
ಆಳವಾದ ಮನದ ಗಾಯ-
ಕೆಲ್ಲಿ ಮದ್ದು ಸಿಗುವುದು

ಅಂದು ಕಂಡ ಇನಿತು ಪ್ರೀತಿ
ಇಂದು ಇಲ್ಲಿ ಕಾಣದಿರಲು
ಮತ್ತೆ ಮನಸು ಹುಡುಕುತಿಹುದು
ಒಂದು ಒಲುಮೆಯೊಸರನು


ನನ್ನ ಕವಿತೆ


ಸಂಜೆಗೆಂಪಿನ ಮುಗಿಲ
ಮನ್ಮಥನ ಚಿತ್ತಾರ
ನೋಡುತಿಹ ಜೋಡಿಗಳ
ಪ್ರಣಯವೀ ಕವಿತೆ

ನಲ್ಮೆಯಿಂದಲಿ ನಲ್ಲೆ
ಕವಿಯ ಎದೆಗೊರಗಿರಲು
ಪ್ರೇಮ ಕೊರಲಿನ ಉಲಿಯು
ಈ ನನ್ನ ಕವಿತೆ

ಕವಿಯ ಹೃದಯವನರಿತು
ಪ್ರೇಯಸಿಯು ಉಸುರಿರುವ
ಮೆಲುದನಿಯ ಪಿಸುಮಾತು
ನನ್ನ ಈ ಕವಿತೆ

ಅವಳ ನಗುಮೊಗದಲ್ಲಿ
ಅರಳಿರುವ ಕಮಲದಲೇ
ಹೊಳಪಿರುವ ಕಣ್ಣುಗಳ
ಬೆಳಕು ಈ ಕವಿತೆ

ಪ್ರೀತಿಯಲಿ ಮಿಂದಂಥ
ಹೂವಂಥ ಮಿದುಮನದ
ಭಾವಬ್ಧಿಯಲಿ ಒಂದು
ಅಲೆಯು ಈ ಕವಿತೆ

ನಿರ್ಭಾವತೆಗೆ ಏರಿ
ತಪವ ಕೊಂಡಿಹ ಮುನಿಯ
ಕೊನೆಯ ಮೋಹದ ಕೊಂಡಿ
ಈ ನನ್ನ ಕವಿತೆ  

Thursday, July 12, 2018

ಮನ ನೀನು



ಅಗೆದಷ್ಟು ಗಹನವಾಗುತಿಹೆ ಮನ ನೀನು

ಮಂಜು ಕವಿದಂದದಿ ಅಸ್ಪಷ್ಟ ನೀನು



ತೆಗೆದಷ್ಟು ನಿಧಿ ಬತ್ತದಂತಿಹೆ ನೀನು

ಮೊಗೆದಷ್ಟು ಸುಪ್ತ ರತ್ನಗಳ ಗಣಿ ನೀನು



ಅರೆದಷ್ಟು ಪುಡಿಯಾದ ಸೂಕ್ಷ್ಮ ನೀನು

ಅಂಧಕಾರದಿ ಬೆಳಕ ಭ್ರಮೆಯು ನೀನು



ಬಗೆದಷ್ಟು ಬಯಕೆಗಳ ಹುಟ್ಟು ತವರು ನೀನು

ಕಾಮ ಕ್ರೋಧಗಳಿಗಾಕಾರನು ನೀನು



ನಿನ್ನಲ್ಲಿ ಭಕ್ತಿ ಭಾವ ಪರವಶತೆಯುಂಟು

ನಿನ್ನಲ್ಲಿ ಭಯ ಅಹಂಕಾರಗಳು ಉಂಟು



ಹಂಸ ತೂಲಿಕ ತಲ್ಪ-ದಲಿ ದುಃಖ ಕೊಡಬಲ್ಲೆ

ಕಲ್ಲು ಹಾದಿಯ ಮೇಲೆ ಸುಖವ ಕೊಡಬಲ್ಲೆ



ಅಳೆದಷ್ಟು ಅಳೆದಿಲ್ಲದಂತಿರುವೆ ಎಲೆ  ಮನವೆ

ತಿಳಿದಷ್ಟು ತಿಳಿದಿಲ್ಲದಂತಿರುವೆ ನೀನು



ಎಲೆ ನಿಗೂಢನೆ ನೀನು ಎನ್ನಯ ಮನವೇ

ಎಂತು ಮೂಢನು ನಾನು ನಿನ್ನನರಿಯೆ

Sunday, July 8, 2018

ಬೇಕಾದವರು

ಕವಿತೆಯನು ಪರಿಕಿಸುವ
ಮೃದು ಹೃದಯವು ಬೇಕು

ಕವಿಯ ಮನಸನು ಅಗೆವ
ಸಾಧಕರು ಇರಬೇಕು

ತಿದ್ದಿ ತೀಡಲು ಒಬ್ಬ
ಕಟುವಿಮರ್ಶಕ ಬೇಕು

ಕಾವ್ಯ ಗಂಧವನರಿತ
ಸುಮನಸರು  ಇರಬೇಕು

ಕವನ ತಥ್ಯವನಳೆಯೆ
ಚಿಂತಕನೂ ಬೇಕು

ಅಂತರಂಗವನರಿವ
ಸಹನಶೀಲರು ಬೇಕು

ಕಿಂಚಿತ್ತು ಬಿನದವಿರೆ
ನಸುನಗುವರಿರಬೇಕು

ಇನಿತು ವಿಷಾದಕ್ಕೆ
ಮನಮಿಡಿವರಿರಬೇಕು

ಗಹನ ಚಿತ್ತದ ಒಸರ
ಹೀರುವರು ಇರಬೇಕು

ಕವಿಯ  ಮನಸಿನ ಗುರಿಯ
ಹಂಬಲಿಸುವರು  ಬೇಕು


Tuesday, July 3, 2018

ಕವಿತೆಯ ಉಗಮ

ಭಾವಲಹರಿಯು ತನ್ನ ಗುರಿಯೆಡೆಗೆ
ಪಯಣಿಸಲು, ತೊಡರುಗಳು ಒದಗಿದರೆ, ಉಗಮವೀ ಕವಿತೆ

ಮನೆಯ ಬೇಕನು ತಣಿಸಿ ಉಳಿದ ಕ್ಷೀರದ
ಮೊಸರ, ಮಂಥನದಿ ಪಡೆಯುವಾ ಬೆಣ್ಣೆಯಂತೆ

ಗಮ್ಯ ತಾಣದ ಕುರಿತು ಒಯ್ಯುವಾ
ರಥ ಮುರಿದು, ಬಿದ್ದ ಕಾಲದಿ ಬಂದ ವಿಮಾನದಂತೆ

ಕಾಲಮೋಡವು ತನ್ನ ದಾರಿಯಲಿ
ಬೆಟ್ಟವಿರೆ, ಅಳಿದು ಇಳೆಗೊರಗುವಾ ಸೋನೆಮಳೆಯಂತೆ

ನಿತ್ಯ ಹೂಡುವ ವೇಷ ಜನರ
ರಂಜಿಸದಿರಲು, ಮಾಂತ್ರಿಕನು ಹೊಸರೂಪ-ವನು ಧರಿಸುವಂತೆ

ಭಾವನಲಹರಿಯು ತನ್ನ ಪ್ರಕಟಣೆಗೆ
ಹವಣಿಸಲು, ಅಡ್ಡಿಗಳು ಬಂದಾಗ, ಉದಯವೀ ಕವಿತೆ   

ಓಹ್ ಚೆರಿ ! ನಾ ನಿನಗೆ ಆಭಾರಿ !

ಓಹ್ ಚೆರಿ  ! ನಾ ನಿನಗೆ ಆಭಾರಿ !

ಶಾಲೆಯಾ ಹಾದಿಯಲಿ ಕಂಡ ನೇರಳೆಹಣ್ಣು
ತಿಂದಿದ್ದ ನೆನಪ ಮರುಜೀವಗೊಳಿಸಿದಕೆ

ಓರಗೆಯ ಮನೆಯಲ್ಲಿ ಬಿದ್ದ ನೇರಳೆಯನ್ನು
ಸ್ನೇಹಿತನ ಜೊತೆ ಮೆದ್ದ ನೆನಪ ತರಿಸಿದಕೆ

ತೋಪು ದಾರಿಯ ಮೇಲೆ ಹರಡಿರುವ ನೇರಳೆಯ
ಅಕ್ಕನೊಂದಿಗೆ ಸವಿದ ಸ್ಮೃತಿಯನುದಿಸಿದಕೆ

ನೆಂಟರಿಷ್ಟರ ಮನೆಯ ಅಂಗಳದ ಹೆಮ್ಮರದಿ
ಬೆಳೆದ ನೇರಳೆಹಣ್ಣ ಮತ್ತೆ ಉಣಿಸಿದಕೆ

ಓಹ್ ಚೆರಿ  ! ನಾ ನಿನಗೆ ಆಭಾರಿ !



Monday, July 2, 2018

ಗೆಳತಿ ನೀನಿಲ್ಲದೇ..

ಗೆಳತಿ ನೀನಿಲ್ಲದೇ.. ನನ್ನ ಹಾಡುಗಳೆಲ್ಲ
ಎಲ್ಲಿ ತಟ್ಟುತ್ತಿವೆ ಕಿವುಡು ಮನಕೆ 

ಜೊತೆಗೆ ನೀನಿಲ್ಲದೇ.. ಎನ್ನ ಗೀತಗಳೆಲ್ಲ
ಎಲ್ಲಿ ಕೇಳುತ್ತಿವೆ ಜಗದ ಕಿವಿಗೆ

ಬಳಿಯೆ ನೀನಿಲ್ಲದೇ.. ಮನದ ಭಾವಗಳೆಲ್ಲ
ಎಲ್ಲಿ ಮುಟ್ಟುತ್ತಿವೆ ಅರಿತ ಎದೆಗೆ

ಬಳಿಯೆ ನೀನಿಲ್ಲದೇ.. ಮಧುರ ಮಾತುಗಳೆಲ್ಲ
ಎಲ್ಲಿ ತಾಕುತ್ತಿವೆ ಮೃದು ಹೃದಯಕೆ

ಮತ್ತು ನೀನಲ್ಲದೇ.. ಎನ್ನೆದೆಯ ಕೋಶದಲಿ
ಶಬ್ದಗಳ ಓದುವರು ಎಂದು ತಿಳಿದೆ

ಮತ್ತೆ ನೀನಲ್ಲದೇ.. ಮಾನಸ ಬೃಂದಾವನದಿ
ನೀರನುಣಿಸುವರೆಂದು ನೀನು ತಿಳಿದೆ

ಮಾಯೆ ನೀನಲ್ಲದೇ .. ಯಾರಿಹರು ನನ್ನನ್ನು
ಜಗದುದರದಲ್ಲಿ ತುಂಬಲೆಂದು ತಿಳಿದೆ.. 
ಜಗದುದರದಲ್ಲಿ ತುಂಬಲೆಂದು ತಿಳಿದೆ..